ಬಲದೇವ ರಾಜ್ ಚೋಪ್ರಾ (೨೨ ಏಪ್ರಿಲ್ ೧೯೧೪ - ೫ ನವೆಂಬರ್ ೨೦೦೮) - ಬಿ.ಆರ್.ಚೋಪ್ರಾ ಭಾರತೀಯ ಚಲನಚಿತ್ರ ನಿರ್ದೇಶಕ, ಮತ್ತು ಬಾಲಿವುಡ್ ಚಲನಚಿತ್ರಗಳು ಮತ್ತು ದೂರದರ್ಶನ ಧಾರಾವಾಹಿಗಳ ನಿರ್ಮಾಪಕ. ಹಿಂದಿ ಚಲನಚಿತ್ರಗಳಾದ ನಯಾ ದೌರ್ (೧೯೫೭), ಸಾಧನಾ (೧೯೫೮), ಕಾನೂನ್ (೧೯೬೧), ಗುಮ್ರಾಃ (೧೯೬೩), ಹಮ್ರಾಜ್ (೧೯೬೭), ಇನ್ಸಾಫ್ ಕಾ ತರಾಜು (೧೯೮೦), ನಿಖಾ (೧೯೮೨), ಅವಾಮ್ (೧೯೮೭), ಮತ್ತು ೧೯೮೮ರಲ್ಲಿ ದೂರದರ್ಶನದ ಟಿವಿ ಸರಣಿ ಮಹಾಭಾರತ್ ನಿರ್ಮಾಪಕ. ಅವರಿಗೆ ೧೯೯೮ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯಿತು. ಅವರ ಕಿರಿಯ ಸಹೋದರ ಯಶ್ ಚೋಪ್ರಾ, ಮಗ ರವಿ ಚೋಪ್ರಾ ಮತ್ತು ಸೋದರಳಿಯ ಆದಿತ್ಯ ಚೋಪ್ರಾ ಕೂಡ ಬಾಲಿವುಡ್ ಉದ್ಯಮದಲ್ಲಿ ನಿರ್ದೇಶಕರಾಗಿದ್ದಾರೆ. ಅವರ ಸೋದರಳಿಯ ಉದಯ್ ಚೋಪ್ರಾ ನಟ ಮತ್ತು ನಿರ್ಮಾಪಕರು. == ಜೀವನಚರಿತ್ರೆ == ಬಿ.ಆರ್.ಚೋಪ್ರಾ ಏಪ್ರಿಲ್ ೨೨ ೧೯೧೪ ರಂದು ರಾಹೊನ್‍ನ ಶಹೀದ್ ಭಗತ್ ಸಿಂಗ್ ನಗರ್ (ಹಿಂದೆ ನವಾನ್‍ಶಹರ್) ಜಿಲ್ಲೆಯ ವಿಲಾಯತಿ ರಾಜ್ ಚೋಪ್ರಾ ಎಂಬ ಲೋಕೋಪಯೋಗಿ ಇಲಾಖೆ ನೌಕರರಿಗೆ ಜನಿಸಿದರು. ನಂತರ ಅವರು ಲಾಹೋರ್‌ಗೆ ಸ್ಥಳಾಂತರಗೊಂಡರು. ಅವರು ತಮ್ಮ ಒಡಹುಟ್ಟಿದವರಲ್ಲಿ ಎರಡನೆಯವರಾಗಿದ್ದರು; ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರ ಕಿರಿಯ ಸಹೋದರ. ಬಿ.ಆರ್.ಚೋಪ್ರಾ ಲಾಹೋರ್‌ನ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪಡೆದರು. ೧೯೪೪ ರಲ್ಲಿ ಲಾಹೋರ್‌ನಲ್ಲಿ ಪ್ರಕಟವಾಗುತ್ತಿದ್ದ ಸಿನಿ ಹೆರಾಲ್ಡ್ ಎಂಬ ಚಲನಚಿತ್ರ-ಮಾಸಿಕದಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮುಂದೆ ಅವರು ಆ ಪತ್ರಿಕೆಯ ಒಡೆತನವನ್ನು ವಹಿಸಿಕೊಂಡು ೧೯೪೭ರವರೆಗೆ ನಡೆಸಿದರು. ಅದೇ ವರ್ಷದಲ್ಲಿ, ಅವರು ಐ.ಎಸ್.ಜೋಹರ್ ಅವರ ಚಾಂದನಿ ಚೌಕ್ ಎಂಬ ಕಥೆಯನ್ನು ಚಲನಚಿತ್ರಕ್ಕೆ ಅಳವಡಿಸಿ, ಅದರ ಕೆಲಸವನ್ನು ಪ್ರಾರಂಭಿಸಿದರು. ಈ ಚಿತ್ರದ ನಾಯಕನಾಗಿ ನಯೀಮ್ ಹಶ್ಮಿ ಮತ್ತು ನಾಯಕಿಯಾಗಿ ಎರಿಕಾ ರುಕ್ಷಿ ಆಯ್ಕೆಯಾಗಿದ್ದರು. ಚಿತ್ರದ ನಿರ್ಮಾಣ ಪ್ರಾರಂಭವಾಗುತ್ತಿದ್ದಂತೆಯೇ, ಲಾಹೋರ್‌ನಲ್ಲಿ ದೇಶ ವಿಭಜನೆಯ ಗಲಭೆಗಳು ಭುಗಿಲೆದ್ದವು, ಚೋಪ್ರಾ ಮತ್ತು ಕುಟುಂಬ ನಗರದಿಂದ ಪಲಾಯನ ಮಾಡಬೇಕಾಯಿತು. ೧೯೪೭ರಲ್ಲಿ ಭಾರತದ ವಿಭಜನೆ ನಂತರ ಅವರು ದೆಹಲಿಗೆ ಬಂದರು. ನಂತರ ಅಲ್ಲಿಂದ ಮುಂಬೈಗೆ ತೆರಳಿದರು. ಅಲ್ಲಿ ಅವರ ಮೊದಲ ನಿರ್ಮಾಣದ ಕಾರ್ವಾಟ್ ೧೯೪೮ರಲ್ಲಿ ಪ್ರಾರಂಭವಾಯಿತು, ಅದು ಒಳ್ಳೆಯ ಯಶಸ್ಸು ಗಳಿಸಲಿಲ್ಲ. ನಿರ್ದೇಶಕರಾಗಿ ಅವರ ಮೊದಲ ಚಿತ್ರ ಅಫ್ಸಾನಾ ೧೯೫೧ರಲ್ಲಿ ಬಿಡುಗಡೆಯಾಯಿತು, ಅದರಲ್ಲಿ ಅಶೋಕ್ ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಯಶಸ್ವಿಯಾಯಿತು ಹಾಗು ಬಾಲಿವುಡ್‌ನಲ್ಲಿ ಅವರ ಹೆಸರನ್ನು ಸ್ಥಾಪಿಸಿತು. ಚೋಪ್ರಾ ಅವರು ಮೀನಾ ಕುಮಾರಿ ನಾಯಕಿಯಾಗಿ ನಟಿಸಿದ ಚಾಂದನಿ ಚೌಕ್ ೧೯೫೪ರಲ್ಲಿ ಬಿಡುಗಡೆ ಮಾಡಿದರು. ೧೯೫೫ರಲ್ಲಿ, ಚೋಪ್ರಾ ತಮ್ಮದೇ ಆದ ನಿರ್ಮಾಣ ಸಂಸ್ಥೆ, ಬಿಆರ್ ಫಿಲ್ಮ್ಸ್ ಸ್ಥಾಪಿಸಿದರು. ಈ ನಿರ್ಮಾಣ ಸಂಸ್ಥೆಯ ಮೊದಲ ಚಲನಚಿತ್ರ ಏಕ್ ಹಿ ರಾಸ್ತಾ ಅತ್ಯಂತ ಯಶಸ್ವಿಯಾಯಿತು. ಅದರ ನಂತರ ದಿಲೀಪ್ ಕುಮಾರ್ ಮತ್ತು ವೈಜಯಂತಿಮಾಲಾ ಅಭಿನಯದ ನಯಾ ದೌರ್ (೧೯೫೭) ಬಿಡುಗಡೆ ಕಂಡಿತು. ಈ ಚಿತ್ರವು ಸುವರ್ಣ ಮಹೋತ್ಸವದ ಸಂಭ್ರಮ ಅನುಭವಿಸಿತು. ನಂತರ ಬಿಡುಗಡೆಯಾದ ಕಾನೂನ್, ಗುಮ್ರಾಃ, ಹಮ್ರಾಜ್ ಅರವತ್ತರ ದಶಕದಲ್ಲಿ ಪ್ರಮುಖ ಯಶಸ್ಸನ್ನು ಕಂಡವು. ೧೯೬೩ ರಲ್ಲಿ, ಅವರು ೧೩ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸದಸ್ಯ ತೀರ್ಪುಗಾರರಾಗಿದ್ದರು. ನಟ ದಿಲೀಪ್ ಕುಮಾರ್ ಅವರೊಂದಿಗಿನ ಅವರ ದ್ವಿತೀಯ ಚಿತ್ರ ದಾಸ್ತಾನ್, ೧೯೭೨ ರಲ್ಲಿ ಬಿಡುಗಡೆಹೊಂದಿ ವಿಫಲವಾಯಿತು. ಚೋಪ್ರಾ ೧೯೭೨ರ ನಂತರ ಬೇರೆ ಬೇರೆ ಪ್ರಕಾರಗಳ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸನ್ನು ಗಳಿಸಿದರು. ಇವುಗಳಲ್ಲಿ ರೋಮಾಂಚಕಾರಿ ಶೈಲಿಯ ಡೂಂಡ್, ಸಾಮಾಜಿಕ ಕಥೆಯ ಕರ್ಮ (೧೯೭೭), ಹಾಸ್ಯ ಶೈಲಿಯ ಪತಿ ಪತ್ನಿ ಔರ್ ವೋ, ಅಪರಾಧ ಶೈಲಿಯ ಚಲನಚಿತ್ರ ಇನ್ಸಾಫ್ ಕಾ ತರಾಜು, ಮತ್ತು ರಾಜಕೀಯ ರೋಮಾಂಚಕ ಶೈಲಿಯ ಆವಾಂ, ಮುಸ್ಲಿಂ ಸಮಾಜದ ಕಥೆಯ ನಿಖಾ. ಅವರ ಕಿರಿಯ ಸಹೋದರ ಯಶ್ ಚೋಪ್ರಾ ನಿರ್ದೇಶನದ ಧೂಲ್ ಕಾ ಫೂಲ್, ವಕ್ತ್, ಆದ್ಮಿ ಓರ್ ಇನ್ಸಾನ್ ಮತ್ತು ಇತ್ತೆಫಾಕ್ ಗಳಿಗೆ ಅವರು ನಿರ್ಮಾಪಕರಾಗಿದ್ದರು ಮತ್ತು ರವಿ ಚೋಪ್ರಾ ನಿರ್ದೇಶನದ ದಿ ಬರ್ನಿಂಗ್ ಟ್ರೈನ್, ಆಜ್ ಕಿ ಆವಾಜ್, ಮಜ್ದೂರ್, ಬಾಗ್ಬನ್, ಬಾಬುಲ್, ಭೂತ್‍ನಾಥ್ ಚಿತ್ರಗಳನ್ನೂ ನಿರ್ಮಿಸಿದರು. ಗಾಯಕ ಮಹೇಂದ್ರ ಕಪೂರ್ ಅವರ ವೃತ್ತಿಜೀವನವನ್ನು ಅಭಿವೃದ್ಧಿಪಡಿಸುವಲ್ಲಿ ಚೋಪ್ರಾ ಪ್ರಮುಖ ಪಾತ್ರ ವಹಿಸಿದ್ದರು, ಅವರ ಹೆಚ್ಚಿನ ಚಲನಚಿತ್ರಗಳಲ್ಲಿ ಮಹೇಂದ್ರ ಕಪೂರ್ ಕೆಲಸ ಮಾಡಿದರು. (ನಿರ್ದೇಶಕ-ನಿರ್ಮಾಪಕರಾದ ಯಶ್ ಚೋಪ್ರಾ, ಮಹೇಂದ್ರ ಕಪೂರ್ ಅವರ ಮಗನನ್ನು ಫಾಸ್ಲೆ ಚಲನಚಿತ್ರದಲ್ಲಿ ನಟನಾಗಿ ಮುಂದೆ ತಂದಿದ್ದರು). ಬಿ.ಆರ್.ಚೋಪ್ರಾ ಅವರ ಒಂದು ಪ್ರಮುಖ ವಿಷಯವೆಂದರೆ, ಲತಾ ಮಂಗೇಶ್ಕರ್ ಮತ್ತು ಮೊಹಮ್ಮದ್ ರಫಿ ಅವರ ಚಿತ್ರಗಳಲ್ಲಿ ಹಾಡಿದ ಹಾಡುಗಳು ಕಡಿಮೆ, ಆಶಾ ಭೋಸ್ಲೆ ಮತ್ತು ಮಹೇಂದ್ರ ಕಪೂರ್ ಅವರ ಆದ್ಯತೆಯ ಗಾಯಕರು. ಇದರ ಹಿಂದಿನ ಕಾರಣವನ್ನು ಅವರು ಅಥವಾ ಗಾಯಕರು ಬಹಿರಂಗಪಡಿಸಿಲ್ಲ. ಪ್ರಾಸಂಗಿಕವಾಗಿ, ಬಿ.ಆರ್.ಚೋಪ್ರಾ ಮತ್ತು ಮಹೇಂದ್ರ ಕಪೂರ್ ಇಬ್ಬರೂ ೨೦೦೮ರಲ್ಲಿ ಒಂದು ತಿಂಗಳಿಗಿಂತಲೂ ಕಡಿಮೆ ಅಂತರದಲ್ಲಿ ನಿಧನರಾದರು. ಭಾರತೀಯ ದೂರದರ್ಶನ ಇತಿಹಾಸದ ಅತ್ಯಂತ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾದ ಮಹಾಭಾರತ್ ಮೂಲಕ ಚೋಪ್ರಾ ದೂರದರ್ಶನಕ್ಕೆ ಕಾಲಿಟ್ಟರು, ಅದರಲ್ಲಿ ನಿತೀಶ್ ಭಾರದ್ವಾಜ್ ಕೃಷ್ಣನ ಪಾತ್ರವನ್ನು ನಿರ್ವಹಿಸಿದರು, ಮತ್ತು ಈ ಧಾರವಾಹಿಯನ್ನು ಅವರ ಮಗ ರವಿ ಚೋಪ್ರಾನೊಂದಿಗೆ ಸಹ-ನಿರ್ದೇಶಿಸಿದ್ದಾರೆ. ಅವರು ಬಹದ್ದೂರ್ ಷಾ ಜಫರ್, ಕಾನೂನ್ (೧೯೯೩), ಆಪ್ ಬೀತಿ, ವಿಷ್ಣು ಪುರಾಣ್ (೨೦೦೦) ಮತ್ತು ಮಾ ಶಕ್ತಿ ಸರಣಿಯನ್ನು ನಿರ್ಮಿಸಿದರು. ಅವರು ೨೦೦೦ರ ನಂತರ ಬಾಗ್‌ಭನ್, ಬಾಬುಲ್ ಮತ್ತು ಭೂತ್‍ನಾಥ್ ಚಲನಚಿತ್ರಗಳನ್ನು ನಿರ್ಮಿಸಿದರು. ಅವರು ನವೆಂಬರ್ ೫, ೨೦೦೮ ರಂದು ತಮ್ಮ ೯೪ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು, ಅವರ ಮಗ ರವಿ ಚೋಪ್ರಾ ಮತ್ತು ಇಬ್ಬರು ಪುತ್ರಿಯರಾದ ಶಶಿ ಮತ್ತು ಬೀನಾ ಅವರನ್ನು ಅಗಲಿದರು. == ಪ್ರಶಸ್ತಿಗಳು == ನಾಗರಿಕ ಪ್ರಶಸ್ತಿಗಳು ಪದ್ಮಭೂಷಣ್ -೨೦೦೧ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ೧೯೬೦ : ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಮೆರಿಟ್ ಪ್ರಮಾಣಪತ್ರ; - ಕಾನೂನ್ ೧೯೬೧ : ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ - ಧರ್ಮಪುತ್ರ ೧೯೯೮: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಫಿಲ್ಮ್‌ಫೇರ್ ಪ್ರಶಸ್ತಿಗಳು ೧೯೬೨ : ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ : ಕಾನೂನ್ ೨೦೦೩: ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಇತರೆ ಪ್ರಶಸ್ತಿಗಳು ೨೦೦೮: ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿ. == ಚಿತ್ರಗಳು == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ರಾಜ್ ಚೋಪ್ರಾ :(ಬಿ.ಆರ್. ಚೋಪ್ರಾ) ಜೀವನಚರಿತ್ರೆ ಬಿ.ಆರ್.ಚೋಪ್ರಾರ ಮರೆಯಲಾಗದ ಚಲನಚಿತ್ರಗಳು ರೆಡಿಫ್.ಕಾಮ್